‘ಜ್ಞಾನದ ಅನ್ವೇಷಣೆಗೆ ಹೊರಟವರು ಹಿಂದಿರುಗುವತನಕ ದೇವರ ಹಾದಿಯಲ್ಲಿರುತ್ತಾರೆ’.-ಅಲ್ ತಿರ್ಮಿದಿ, ಸುನಾನ್, 39:2 (ಮುಸ್ಲಿಮ್ ಟ್ರಾವೆಲರ್ಸ್: ಪಿಲಿಗ್ರಿಮೇಜ್, ಮೈಗ್ರೇಷನ್ ಅಂಡ್ ದಿ ರಿಲಿಜಿಯಸ್ ಇಮ್ಯಾಜಿನೇಷನ್, ಸಂಪಾದಕರು: ಟೇಲರ್ ಮತ್ತು ಫ್ರಾನ್ಸಿಸ್)
ಮರುಭೂಮಿಯಲ್ಲಿ ಆಕಸ್ಮಾತ್ತಾಗಿ ಮಾನವನ ಹೆಜ್ಜೆ ಗುರುತುಗಳನ್ನು ಕಂಡು ಚಕಿತರಾದೆವು.
ಉತ್ತರದ ಹಕಲ್ ಕಡೆಗೆ ಇಂಚಿಂಚೆ ಸರಿಯುತ್ತಿದ್ದೆವು. ಮೆಡಿಟರೇನಿಯನ್ ಸಮುದ್ರದ ಪೂರ್ವಭಾಗದ ಏರು ಹಾದಿಯಲ್ಲಿ ಅಕಬ ಕೊಲ್ಲಿಯ ಸಮುದ್ರದ ತೀರದಲ್ಲಿ, ಶ್ವೇತ ಬಯಲನ್ನು ಬಳಸಿ ನಡೆಯುತ್ತಿದ್ದೆವು. ಗಾಳಿಯಲ್ಲದೆ ಬೇರೇನೂ ಚಲಿಸುತ್ತಿರಲಿಲ್ಲ. ಕಾಲದ ಅಗಮ್ಯತೆಯಲ್ಲಿ ಸೃಷ್ಟಿಯಾದ ಮರಳಿನ ಕಣಗಳನ್ನು ಅನುಭವಿಸುತ್ತಿದ್ದೆವು: ಇದ್ದಕ್ಕಿದ್ದಂತೆ ಈ ಜಾಡು ಕಾಣಿಸಿಕೊಂಡಿತು. ಒಬ್ಬ ಮಾನವ ಜೀವಿ ಒಂಟೆಗಳಿಲ್ಲದೆ ಪೂರ್ವದ ಕಡೆ ನಡೆದು ಹೋಗಿದ್ದಾನೆ, ಒಂಟಿ. ಅಲಿ ಅಲ್ ಹರ್ಬಿ, ನನ್ನ ದುಭಾಷಿ, ಛಾಯಾಚಿತ್ರ ತೆಗೆಯುವಂತೆ ಸೂಚಿಸಿದ. ಆದರೆ ಕೊನೆ ಎಲ್ಲಿದೆ? ಈ ಮುದ್ರೆ ಯಾರಾದ್ದಾದರೂ ಆಗಿರಬಹುದು, ನಮ್ಮದೂ ಸಹ ಇರಬಹುದೇನೋ. ನಾಳೆ ಅದೃಶ್ಯವಾಗುತ್ತದೆ. (ನಮ್ಮ ಗುರುತುಗಳು ಅದೃಶ್ಯವಾದಂತೆ.- ಪ್ಯಾಲೆಸ್ತೇನ್ ನಂತರ ಸಿರಿಯಾ ಕಡೆಯಿಂದ ಚಿರಂತನವಾಗಿ ಬೀಸುವ ಉತ್ತರ ಮಾರುತಗಳಿಂದ). ಆದರೂ ಆ ಜಾಡಿನ ಶಕ್ತಿ - ನಮ್ಮ ಗಮನವನ್ನು ಸೆಳೆದ ಅದರ ಸಾಮರ್ಥ್ಯ - ಸೌದಿ ಅರೇಬಿಯಾದ ಅಸಂಗತೋಕ್ತಿಯನ್ನು ನಿರೂಪಿಸಿತು. ಈ ಪ್ರಸಿದ್ಧ ಮರುಭೂಮಿ ಒಂದು ಕಾಲಕ್ಕೆ ನೆಲೆಸಿದ್ದ ಐತಿಹಾಸಿಕ ಬುಡಕಟ್ಟಿನವರಿಂದ- ಬೆಡೋಯಿನ್-ಮನೆಮಾತಾಗಿದ್ದ ಈ ಐತಿಹ್ಯ ಈಗ ಹತ್ತಿರ ಹತ್ತಿರ ಶೂನ್ಯವಾಗಿದೆ. ನಗರಗಳು, ತೈಲ ಮತ್ತು ಕಾರುಗಳ ಆಗಮನದಿಂದ ಬೆತ್ತಲೆಯಾಗಿದೆ. 700 ಮೈಲಿಗಳ ಈ ಹಾದಿಯಲ್ಲಿ ಇದು ಎರಡನೆ ಬಾರಿ ಹೆಜ್ಜೆ ಗುರುತುಗಳನ್ನು ಕಂಡಿದ್ದು.
ಹೆಜಾಜ್ ಮರುಭೂಮಿಯಲ್ಲಿ ನಡೆಯುವುದೆಂದರೆ ಕನಸಿನಲ್ಲಿ ಚಲಿಸದಂತೆ. ಕ್ಷೋಬೆಗೊಂಡ ಒಂದು ಸಮಾಜ, ಕಪ್ಪು ಆಡಿನ ಚರ್ಮದ ಶಿಬಿರಗಳಿಂದ ಗಾಜಿನ ಗಗನ ಚುಂಬಿ ಕಟ್ಟಡಗಳೆಡೆಗೆ ಉಡಾವಣೆಗೊಂಡಂತೆ. ಭ್ರಮಾಲೋಕದಲ್ಲಿದ್ದಂತ ನಿಯಾನ್ ಲೈಟ್ನಲ್ಲಿ ಬೆಳಗುತ್ತಿದ್ದ ವಾಹನ ನಿಲ್ಧಾಣಗಳು ಮತ್ತು ಪಿಜ್ಜಾ ಉಪಾಹಾರಗೃಹಗಳು. (ಹವಾನಿಯಂತ್ರಿತ ಶೀಥಲ ಕೊಠಡಿಯೊಳಗೆ ಕುಳಿತ್ತಿದ್ದ ಸೌದಿಗಳು ಗಾಜಿನ ಮೂಲಕ ನಮ್ಮನ್ನು ದೃಷ್ಟಿಸುತ್ತಿದ್ದರು. ಕುದಿಯುವ ಕುಲುಮೆಯಂತಿದ್ದ ಶಾಖದಲ್ಲಿ ಒಬ್ಬ ಅಮೇರಿಕನ್ ಎರಡು ಒಂಟೆಗಳ ಮುಂದಾಳತ್ವ ವಹಿಸಿ ನಡೆಯುವುದನ್ನು.) ಸಂಬಂಧವೇ ಇಲ್ಲದಂತೆ ಬೇರ್ಪಟ್ಟ, ಪ್ರತ್ಯೇಕಿಸಲ್ಪಟ್ಟಂತ ಗಾಢವಾದ ಆ ಅನುಭವ. ದೈನಂದಿನ ಧಾರ್ಮಿಕ ಆಚರಣೆಗಳಲ್ಲಿ ಮುಳುಗಿಹೋಗುವ (“ಕ್ಷಮಿಸಿ, ಮಿ. ಪಾಲ್ ನಾನು ಪ್ರಾರ್ಥನೆಗೆ ಹೋಗಬೇಕಾಗಿದೆ”.) ಗೋಡೆಗಳು, ಮತ್ತು ಮುಸುಕುಗಳು ಮತ್ತು ವೀಸಾ ನಿರ್ಬಂಧದ ನೋವುಗಳನ್ನು ಅರಗಿಸಿಕೊಳ್ಳಬೇಕಾಗಿದೆ. ಪರಸ್ಪರರ ನಡುವೆ ವಿಸ್ಮಯತೆ. ಇದು ತೀರಾ ಅಸಂಭವ. ಚರಿತ್ರೆಯಲ್ಲಿ ದಿಗ್ಭ್ರಮೆಗೊಂಡ ಶೂನ್ಯತೆ.
ಹೆಜ್ಜೆಗಳನ್ನು ಕಂಡ ದಿನ ಬಟಾಬಯಲಲ್ಲೆ ಶಿಬಿರ ಹೂಡಿದೆವು.
ಒಂದು ಚಿಕ್ಕ ದಿಬ್ಬದ ಮೇಲೆ ನಿಂತಿದ್ದೆ. ಫೋನ್ ತರಂಗಾಂತರಗಳನ್ನು ಅನ್ವೇಷಿಸುತ್ತಾ. ಸೂರ್ಯ ಮುಳುಗುತ್ತಿದ್ದ, ಆದರೆ ಮರುಭೂಮಿಯಲ್ಲಿ ಸೂರ್ಯನೇ ಭೂಮಿಯಿಂದ ಮೇಲೆದ್ದಂತ ಅನುಭವ, ಆಕಾಶದಿಂದ ಇಳಿದಂತಲ್ಲಾ. ದೂರದಲ್ಲಿ ಮಾತುಗಳು ಕೇಳಿದವು. ನಮ್ಮ ಶಿಬಿರದಿಂದ: ಅಲಿ ಅಲ್ ಹರ್ಬಿ, ಅವಾದ್ ಓಮ್ರಾನ್, ಮತ್ತು ಹಸನ್ ಅಲ್ ಫೈದಿ, ನನ್ನ ನಡಿಗೆಯ ಜೊತೆಗಾರರು. ಇರುಳಪ್ಪುತ್ತಿರುವ ಆ ಹೊತ್ತಿನಲ್ಲಿ ಎಲ್ಲೋ ದೂರದಲ್ಲಿ: ಗಡಿಕಾಯುವ ಸೈನಿಕರ ವಾಹನ ನಿಂತಿರುವುದು ಕಂಡಿತು. ಸುಮಾರು ವಾರಗಳಿಂದ ಇವರು ನಮ್ಮ ಮೇಲೆ ಕಣ್ಣಿಟ್ಟಿದ್ದಾರೆ.
"ನಮ್ಮನ್ನೇಕೆ ಹಿಂಬಾಲಿಸುತ್ತಿರುವಿರಿ?" ನಾನು ಸೈನಿಕರನ್ನು ಕೇಳಿದೆ.
"ನಿಮ್ಮನ್ನು ರಕ್ಷಿಸುತ್ತಿದ್ದೇವೆ."
"ಯಾವುದರಿಂದ?"
"ನಿಮ್ಮನ್ನು ರಕ್ಷಿಸುತ್ತಿದ್ದೇವೆ."
ಪಶ್ಚಿಮದೇಶಗಳಲ್ಲಿ, ಜಾಹೀರಾತುಗಳ ತಡೆರಹಿತ ಹರಟೆಗಳು, ಟೆಲಿವಿಷನ್ಗಳ ಕ್ಷುಲ್ಲಕ ವಿಷಯಗಳು, ಫೋನ್ ಸಂದೇಶಗಳು, ಮತ್ತು ಫೋನ್ ಕರೆಗಳು, ಮುಖ್ಯವಾದ ವಿಷಯವನ್ನು ಮರೆಸುತ್ತವೆ. ಆದರೆ ಸೌದಿ ಅರೇಬಿಯಾದಲ್ಲಿ, ಹಳೆಕಾಲದ ನಿಶ್ಯಬ್ದತೆಗೆ ಇನ್ನು ಬೆಲೆಯಿದೆ.
ಚಿಂತಾಕ್ರಾಂತನಾಗಿ ಅಸಮಧಾನದಿಂದ ಶಿಬಿರದತ್ತ ಇಳಿದು ಬಂದೆ. ಹತ್ತಿರ ಬಂದಂತೆ ಅನಿಲ ಒಲೆಯ ಹಿಸ್ ಶಬ್ದ ಕೇಳಿಬರುತ್ತಿತ್ತು, ಮರಳಿನ ಮೇಲೆ ಕಂಬಳಿ ಹಾಸಿತ್ತು, ನನ್ನ ಸ್ನೇಹಿತರು ನಗುತ್ತಿರುವುದು ಕೇಳುತ್ತಿತ್ತು. ಸೈನಿಕರ ಉಪಸ್ಥಿತಿಯಿಂದ ಅವರೇನೂ ಚಿಂತೆಗೊಳಗಾಗಿಲ್ಲ. ಚಹಾ ಕುಡಿಯುತ್ತಾ ಮೊಣಕೈ ಮೇಲೆ ಮಲಗಿ, ಕತೆಗಳನ್ನು ಹೇಳುತ್ತಿದ್ದರು. ಇನ್ನೇನು ಶಿಬಿರಕ್ಕೆ 30 ಹೆಜ್ಜೆಗಳಿರುವಂತೆ ನನ್ನ ಮನಸ್ಸು ಶಾಂತವಾಯಿತು. ನನ್ನ ಹೃದಯ ಸಮಾಧಾನ ಸ್ಥಿತಿಗೆ ಬಂತು. ನನ್ನ ಸಹ ಪ್ರಯಾಣಿಕರಾದ ಇವರೇ ಸೌದಿ ಅರೇಬಿಯಾ. ಮರುಭೂಮಿಯಲ್ಲ. ನಾವೆಲ್ಲಾ ಒಟ್ಟಾಗಿರುವುದೇ ಸಂತೋಷ. ನಮ್ಮ ಮೇಲೆ ಕಣ್ಣಿಟ್ಟಿರುವ ಸೈನಿಕರೂ ಸಹ. ನಾವೆಲ್ಲಾ ಒಟ್ಟಿಗೆ ಪ್ರಯಾಣಿಸುತ್ತಿದ್ದೇವೆ, ನಾವೆಲ್ಲಾ ಎಂದಿಗೂ ಮಾಡುವಂತೆ.
ಜೀವನದ ಕೊನೆಯವರೆಗೂ ಸ್ನೇಹಿತರಾಗೆ ಉಳಿಯುವ ಅಲಿ, ಅವಾದ್ ಮತ್ತು ಹಸನ್ಗೆ ಇಂದು ವಿದಾಯ ಹೇಳಿದೆ. ನಮ್ಮ ಸಾಮಾಗ್ರಿಗಳ ಸರಬರಾಜುದಾರ ಸಯೀದ್ ಅಲ್ ಫೈದಿಗೂ ಸಹ ವಿದಾಯ ಹೇಳಿದೆ, ಯನ್ಬುವಿನ ಹೊರಗಿರುವ ಅವನ ಮರುಭೂಮಿ ತೋಟದಲ್ಲಿ ನಮ್ಮ ಧೈರ್ಯಶಾಲಿ ಒಂಟೆಗಳಾದ ಫೇರ್ಸ್ ಮತ್ತು ಸೀಮಾರನ್ನು ಅವುಗಳ ಜೀವನದ ಕೊನೆಯ ಕ್ಷಣದವರೆಗೂ ಸಾಕುತ್ತಾನೆ. ಹಕಲ್ ನ ಉಪ ರಾಜ್ಯಪಾಲರಿಗೂ ಸಹ ವಿದಾಯ ಹೇಳಿದೆ, ಸೌದಿ ಅರೇಬಿಯಾ ಮತ್ತು ಜೊರ್ಡಾನ್ ನಡುವಿನ 500 ಗಜದಷ್ಟು ಅಂತರರಾಷ್ಟ್ರೀಯ ಗಡಿಯನ್ನು ನಡಿಗೆಯಲ್ಲಿ ದಾಟಲು ಒಪ್ಪಿಗೆ ನೀಡಿದ್ದಾರೆ - ಬಹುಶಃ ಈ ಮೊದಲು ಈ ಚಾರಣವನ್ನು ಯಾರೂ ಪ್ರಯತ್ನಿಸಿರುವುದಿಲ್ಲ. ಅಂತಿಮವಾಗಿ ಸೌದಿ ಅರೇಬಿಯಾ ರಾಜ್ಯಾಧಿಪತ್ಯಕ್ಕೆ ವಿದಾಯ ಹೇಳಿದೆ.
Paul Salopek
ಹಕಲ್ನಿಂದ ಜೋರ್ಡಾನಿನ ಅಕಾಬಾಗೆ ಇಪ್ಪತ್ತೇಳು ಒಣ ಮೈಲಿಗಳು. ನನಗೆ ಶಕ್ತಿ ನೀಡಲು ಇರುವುದು ಸೀಬೆಹಣ್ಣಿನ ರಸದ ಒಂದು ಚಿಕ್ಕ ಬಾಟಲು ಮಾತ್ರ.
ಮರುಭೂಮಿಯ ಹೆಬ್ಬಾಗಿಲಿನಿಂದ ಹೊರಬಿದ್ದಾಗ ಕೆಲವೇ ಉಡುಪುಗಳು ನನ್ನ ಬೆನ್ನು ಚೀಲದಲ್ಲಿ ಮತ್ತು ಇನ್ನೊಂದು ಚೀಲದಲ್ಲಿ ಕೆಲವು ದಿನಚರಿಯ ಪುಸ್ತಕಗಳು - ನೀಲಿ-ಗೆರೆಯ ಕಾಗದದ ಪ್ಯಾಡನ್ನು ರಬ್ಬರ್ ಬ್ಯಾಂಡಿನಿಂದ ಸುತ್ತಿದ್ದೆ ಮತ್ತು ಅವುಗಳಿಗೆ ನನ್ನ ಬೆವರು, ಒಂಟೆಗಳ ಮಲ ಮತ್ತು ನನ್ನ ರಕ್ತ ಅಂಟಿಕೊಂಡಿತ್ತು. ವಿನಾಶಕಾರಿ ಶಾಖದ ಬಗ್ಗೆ ಪುಟಗಳ ಮೇಲೆ ಹುಚ್ಚುಹುಚ್ಚಾಗಿ ಗೀಚಿದ್ದೆ. ನೀರಿನ ಬಾವಿಗಳ ಮೋಟಾರಿನ ಬೇರಿಂಗ್ಗಳಿದ್ದವು. ತೀರ್ಥಯಾತ್ರೆಯ ನಕ್ಷೆಗಳ ಗುರುತುಗಳಿದ್ದವು. ಬೆಡೋಯಿನ್ಗಳ ಬೆಂಕಿಯ ಅಲೌಕಿಕ ಶಕ್ತಿ ಗುಣಪಡಿಸುತ್ತದೆ. ಮೈಲುಗಟ್ಟಳೆ ವಾಕ್ಯಗಳ ಮೂಲಕವೂ ಸಹ ಪ್ರಪಂಚಕ್ಕೆ ಈ ಕಟ್ಟುನಿಟ್ಟಿನ ರಾಜ್ಯ ತೆರೆದುಕೊಂಡಿಲ್ಲ. ಕಾಂಕ್ರೀಟ್ ಹೆದ್ದಾರಿಯ ಪಕ್ಕ ನಡೆಯುತ್ತಾ ಮಧ್ಯಪಾನದ ಕಲಾಕೃತಿಗಳನ್ನು ಏಳುತಿಂಗಳಲ್ಲಿ ಮೊದಲ ಬಾರಿಗೆ ಕಂಡೆ (ಬಾಟಲುಗಳು, ಕ್ಯಾನ್ಗಳು), ಪೊಟಾಷ್ ಗಣಿಯ ನಂತರ, ಒಂದು ಪ್ರವಾಸಿ ಪಟ್ಟಣಕ್ಕೆ ಅಂಕುಡೊಂಕಾದ ಸಮುದ್ರತೀರದ ರಸ್ತೆಯೊಂದು ಕಂಡಿತು. ಬಣ್ಣಬಣ್ಣದ ಉಡುಪು ತೊಟ್ಟಿದ್ದ ಮಹಿಳೆಯರನ್ನು ಕಂಡೆ. ಕೆಲವರು ಕಾರ್ ಚಲಾಯಿಸುತ್ತಿದ್ದರು. ನನ್ನನ್ನು ಯಾರೂ ಗಮನಿಸುತ್ತಿರಲಿಲ್ಲ. ನಾ ಮರುಭೂಮಿಯ ಕಡೆಯಿಂದ ಬೀಸುತ್ತಿರುವ ಮಾರುತದಲ್ಲಿ ಸಿಕ್ಕಿ ಬಂದ ಕಸದ ಉಂಡೆಯಂತಿದ್ದೆ. ಎ.ಟಿ.ಎಂ. ಒಂದು ಕಂಡಿತು. ಸುಸಜ್ಜಿತ ಹೋಟೇಲ್ಗೆ ದಾರಿಯನ್ನು ಕೇಳುತ್ತಾ ಮಿಯಸ್ ವ್ಯಾನ್ ಡೆರ್ ರೋಹೆ ಪೀಠೋಪಕರಣಗಳನ್ನು ಬಳಸಿ ನಡೆದೆ. ಕೆಲವು ಗಂಡಸರು ಪ್ರವಾಸಿಗರಿಗೆ ಒಂಟೆ ಸವಾರಿ ಮಾಡಿಸುತ್ತಿದ್ದರು.
Paul Salopek
“ಮತ್ತೆ ಎಲ್ಲಿಂದ” - ಹೋಟೇಲಿನ ಗುಮಾಸ್ತ, ಕನಿಷ್ಠ ಕುತೂಹಲವೂ ಇಲ್ಲದೆ ಕೇಳಿದ, ಪುಸ್ತಕದಲ್ಲಿ ಮಾಹಿತಿಯನ್ನು ತುಂಬಿದ ನಂತರ - “ಬರುತ್ತಿರುವುದು ಮಿ. ಸಾಲೋಪೆಕ್?”
